ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಅಧಿಕೃತ ಚಾಲನೆ ನೀಡಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಆಯೋಜಿಸಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಚಾಲನೆ ನೀಡಿದರು. ಈ ಬಾರಿಯ ಪ್ರದರ್ಶನವು ಪಶ್ಚಿಮ ಗಂಗರ ಸಾಮ್ರಾಜ್ಯದ ವೈಭವವನ್ನು ಪ್ರತಿಬಿಂಬಿಸುವ ವಿಶೇಷ ಥೀಮ್ನೊಂದಿಗೆ ರೂಪುಗೊಂಡಿದ್ದು, ಆಗಸ್ಟ್ 6ರಿಂದ 17ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ.
ಈ ಬಾರಿ ಪ್ರದರ್ಶನದಲ್ಲಿ 26 ಲಕ್ಷಕ್ಕೂ ಹೆಚ್ಚು ಹೂಗಳು ಹಾಗೂ 130ಕ್ಕೂ ಅಧಿಕ ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ. ಗಾಜಿನ ಮನೆಯಲ್ಲಿ ಬೇಗೂರಿನ ಪಂಚಲಿಂಗೇಶ್ವರ ದೇವಾಲಯ, ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಪ್ರತಿಮೆ, ತಲಕಾಡಿನ ದೇವಾಲಯಗಳು, ಗಂಗರ ಗಜಸೇನೆ, ಯುದ್ಧದೃಶ್ಯಗಳು ಸೇರಿದಂತೆ ಗಂಗರ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೂಗಳ ಮೂಲಕ ಜೀವಂತವಾಗಿ ಮೂಡಿಸಲಾಗಿದೆ.
ಉದ್ಘಾಟನೆ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಪ್ರದರ್ಶನವನ್ನು ವೀಕ್ಷಿಸಿ ವಿವಿಧ ಪುಷ್ಪ ಕಲಾಕೃತಿಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಆಕರ್ಷಣೆಯಾಗಿ ಗಂಗರ ಕಾಲದ ಬೇಗೂರಿನ ದೇವಾಲಯದ ಸುಮಾರು 50 ಅಡಿ ಎತ್ತರದ ಹೂವಿನ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಬೆಂಗಳೂರು ಶಾಸನ, ಬ್ರಹ್ಮಸ್ತಂಭ, ಗಂಗರ ಅರಸರ ಪ್ರತಿಮೆಗಳು ಹಾಗೂ ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಮತ್ತು ಶಿಲ್ಪಕಲೆಗೆ ಗಂಗರ ಕೊಡುಗೆಯನ್ನು ಬಿಂಬಿಸುವ ವಿಶೇಷ ಪ್ರದರ್ಶನಗಳು ಗಮನ ಸೆಳೆಯುತ್ತಿವೆ.
ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಆನ್ಲೈನ್ ಟಿಕೆಟ್ ವ್ಯವಸ್ಥೆ, ಹೆಚ್ಚುವರಿ ವಾಹನ ನಿಲುಗಡೆ, ಸೆಲ್ಫಿ ಪಾಯಿಂಟ್ ಹಾಗೂ ಕೃತಕ ಜಲಪಾತದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಭದ್ರತೆಗಾಗಿ 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಲಕ್ಷಾಂತರ ಮಂದಿ ಈ ವರ್ಷದ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
“ಶ್ರೀ ಗಂಗ ಸಾಮ್ರಾಜ್ಯ ವೈಭವ
ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ “ಶ್ರೀ ಗಂಗ ಸಾಮ್ರಾಜ್ಯ ವೈಭವ” ತೋಟಗಾರಿಕೆ ಇಲಾಖೆಯಿಂದ ಲಾಲ್ಬಾಗ್ನಲ್ಲಿ ಆಯೋಜಿಸಲಾದ “ಶ್ರೀ ಗಂಗ ಸಾಮ್ರಾಜ್ಯ ವೈಭವ” ಕರ್ನಾಟಕದ ಮೊದಲ ರಾಜಮನೆತನಗಳಲ್ಲೊಂದಾದ ಗಂಗರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಇಂದು ಉದ್ಘಾಟಿಸಲಾಯಿತು. ಕನ್ನಡ ನಾಡಿನ ಪ್ರಾಚೀನ ರಾಜಮನೆತನವಾದ ಗಂಗರ ಸಾಮ್ರಾಜ್ಯದ ಇತಿಹಾಸವನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ. ಇಂತಹ ಸುಂದರ ವೈಭವವನ್ನು ಎಲ್ಲರೂ ತಪ್ಪದೇ ಕಣ್ತುಂಬಿಕೊಳ್ಳಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.