ಬೆಂಗಳೂರು: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉದ್ಯಾನನಗರಿಯ ಪ್ರಸಿದ್ಧ ಲಾಲ್ಬಾಗ್ನಲ್ಲಿ ಇಂದಿನಿಂದ ವಿಶೇಷ ಪುಷ್ಪ ಪ್ರದರ್ಶನಗಳು ನಡೆಯಲಿದೆ. ಆಗಸ್ಟ್ 6ರಿಂದ 17ರವರೆಗೆ ನಡೆಯುವ 12 ದಿನಗಳ ಈ ಭವ್ಯ ಪ್ರದರ್ಶನದಲ್ಲಿ ಗಂಗರ ಸಾಮ್ರಾಜ್ಯದ ವೈಭವವನ್ನು ಹೂವಿನ ಕಲಾಕೃತಿಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ. ಈ ಬಾರಿ ಬೇಗೂರಿನ ಪಂಚಲಿಂಗೇಶ್ವರ ದೇವಾಲಯ ಸಮುಚ್ಚಯವನ್ನು ಕೇಂದ್ರ ವಿಷಯವನ್ನಾಗಿ ರೂಪಿಸಿರುವುದು ವಿಶೇಷ ಆಕರ್ಷಣೆಯಾಗಿದೆ.
ಪ್ರದರ್ಶನದಲ್ಲಿ ಸಾವಿರಾರು ಬಣ್ಣ ಬಣ್ಣದ ಹೂಗಳಿಂದ ಗಂಗರ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಜೀವಂತವಾಗಿ ಮೂಡಿಸಲಾಗಿದ್ದು, ಪ್ರೇಕ್ಷಕರನ್ನು ಇತಿಹಾಸದತ್ತ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಇದಲ್ಲದೆ, ಪುರಾತನ ದೇವಾಲಯಗಳ ಮಾದರಿಗಳು, ಐತಿಹಾಸಿಕ ಶಿಲ್ಪಗಳು ಹಾಗೂ ಯುದ್ಧ ಆನೆಗಳ (War Elephants) ಆಕರ್ಷಕ ಹೂವಿನ ಕಲಾಕೃತಿಗಳು ಈ ಬಾರಿಯ ಪ್ರಮುಖ ವಿಶೇಷಗಳಾಗಿವೆ.
ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉದ್ಯಾನವನ ಇಲಾಖೆ ಆಯೋಜಿಸಿರುವ ಈ ಪ್ರದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.ಇತಿಹಾಸ, ಸಂಸ್ಕೃತಿ ಮತ್ತು ಹೂವಿನ ಸೌಂದರ್ಯದ ಅಪೂರ್ವ ಸಂಗಮವಾಗಿರುವ ಈ ವರ್ಷದ ಲಾಲ್ಬಾಗ್ ಪುಷ್ಪ ಪ್ರದರ್ಶನ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡಲಿದೆ.
ಟಿಕೆಟ್ ಬೆಲೆ ( ಒಬ್ಬರಿಗೆ)
ವಯಸ್ಕರಿಗೆ ರೂ.80
ಶನಿವಾರ ಮತ್ತು ರಜಾ ದಿನಗಳಲ್ಲಿ 100
12 ವರ್ಷದೊಳಗಿನ ಮಕ್ಕಳಿಗೆ ರೂ.30
ಶಾಲಾ ಸಮವಸ್ತ್ರ ಧರಿಸಿ ಬರುವ ಎಲ್ಲಾ ಮಕ್ಕಳಿಗೆ ಉಚಿತ ಪ್ರವೇಶ
ಪ್ರದರ್ಶನದ ಮಾಹಿತಿ
• ದಿನಾಂಕ: ಆಗಸ್ಟ್ 6 ರಿಂದ 17, 2026
• ಸ್ಥಳ: ಲಾಲ್ಬಾಗ್ ಗಾಜಿನ ಅರಮನೆ, ಬೆಂಗಳೂರು
• ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ
ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನ!
ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಲಾಲ್ಬಾಗ್ನ ಬಣ್ಣ-ಬಣ್ಣದ ಹೂವುಗಳ ನಡುವೆ ಕರ್ನಾಟಕದ ಭವ್ಯ ಇತಿಹಾಸವನ್ನು ಕಣ್ತುಂಬಿಕೊಳ್ಳಬಹುದು. ಕರ್ನಾಟಕದ ಮೊಟ್ಟಮೊದಲ ರಾಜವಂಶದ ಐತಿಹ್ಯವನ್ನು ಸಾರುವ “ಶ್ರೀ ಗಂಗ ಸಾಮ್ರಾಜ್ಯ ವೈಭವ” ಎಂಬ ವಿಷಯಾಧಾರಿತವಾಗಿ ನಾಳೆಯಿಂದ ಆಗಸ್ಟ್ 17ರವರೆಗೆ ಬೆಂಗಳೂರಿನ ಲಾಲ್ಬಾಗ್ ಸಸ್ಯೋದ್ಯಾನವನದಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ತಪ್ಪದೇ ಭೇಟಿ ನೀಡಿ ಎಂದು ಸಿಎಂ ಡಿಕೆ ಶಿವಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.