ರಾಮನಗರ: ಬಿಡದಿ ಟೌನ್ ಶಿಪ್ ವಿಚಾರವಾಗಿ ಒಂದೆಡೆ ಹಲವು ರೈತರು ಪರವಾಗಿ ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೆ ಹಲವು ರೈತರು ಟೌನ್ ಶಿಪ್ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕೇಂದ್ರ ಸಚಿವ್ ಹೆಚ್.ಡಿ.ಕುಮಾರಸ್ವಾಮಿ ತಾವು ಹೇಳಿದಂತೆ ಇಂದು ಬೈರಮಂಗಲಕ್ಕೆ ಆಗಮಿಸಿದ್ದು, ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೈರಮಂಗಲಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ, ಮೊದಲಿಗೆ ಟೌನ್ ಶಿಪ್ ಪರವಾಗಿ ಪ್ರತಿಭಟಿಸುತ್ತಿರುವ ರೈತರತ್ತ ಕೈಸನ್ನೆ ಮಾಡಿ ಮುಂದೆ ಸಾಗಿದ್ದಾರೆ. ಟೌನ್ ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದರು. ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಕೇಮ್ಪೇಗೌಡ ಬಡಾವಣೆಯಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇಲ್ಲಿ 10 ಲಕ್ಷ ಸಸಿಗಳನ್ನು ಕಡಿಸುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಗಾಗಿ ರೈತರ ಅಡಿಕೆ, ತೆಂಗಿನ ಮರಗಳನ್ನು ಕಡಿಯಲಾಗುತ್ತಿದೆ. ಅಲ್ಲಿ ಸಸಿಗಳನ್ನು ನೆಟ್ಟು ಇಲ್ಲಿ ಸಸಿಗಳನ್ನು ಕಡಿದು ರೈತರ ಹೊಟ್ಟೆ ಮೇಲೆ ಹೊಡೆದರೆ ಏನು ಬಂತು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕೇವಲ ಸಸಿನಡುವುದಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸವಾಗಬೇಕು ಎಂದರು. ಟೌನ್ ಶಿಪ್ ವಿರೋಧಿಸಿ ರೈತರು 480 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರು, ವೃದ್ಧರು ಸೇರಿದಂತೆ ರೈತರು ಹೋರಾಟ ನಡೆಸುತ್ತಿದ್ದಾರೆ. ತಮ್ಮ ಪೂರ್ವಜರ ಕಾಲದಿಂದ ಇರುವ ಜಮೀನು, ಆಸ್ತಿ ಉಳಿಸಿಕೊಳ್ಳಬೇಕೆಂದು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ ರೈತರ ಸಂಕಷ್ಟದ ಕೂಗು ಮುಖ್ಯಮಂತ್ರಿಗಳಿಗೆ ಕೇಳುತ್ತಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆ. ಸಿಎಂ ಅವರನ್ನು ಬೀದಿಯಲ್ಲಿ ನಿಲ್ಲಿಸಬೇಕೆಂಬ ಉದ್ದೇಶವಿಲ್ಲ. ಬಾಧಿತ ರೈತರ ಜೊತೆ ಮುಕ್ತವಾಗಿ ಚರ್ಚೆ ನಡೆಸಲಿ, ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲಿ ಎಂದು ಆಹ್ವಾನಿಸಿದ್ದೆ. ಆದರೆ ಈವರೆಗೆ ಮುಖ್ಯಮಂತ್ರಿಗಳಿಂದ ಯಾವುದೇ ಉತ್ತರವಿಲ್ಲ ಎಂದು ಗುಡುಗಿದರು.