ಬೆಂಗಳೂರು: ಭೂ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯವೊಂದು ಲೋಕ ಅದಾಲತ್ ನಲ್ಲಿ ಸಂಧಾನವಾದ ನಂತರ ಇತ್ಯರ್ಥ ಮಾಡಿಕೊಂಡು ಮೂರು ವರ್ಷದ ನಂತರ ಅದನ್ನು ಪ್ರಶ್ನಿಸಿದ್ದ ಅರ್ಜಿದಾರನಿಗೆ ಹೈಕೋರ್ಟ್ 25,000 ರೂ. ದಂಡ ವಿಧಿಸಿದೆ/.
ಲೋಕ ಅದಾಲತ್ ನಲ್ಲಿ ಇತ್ಯರ್ಥವಾಗಿದೆ ಎಂದು ಸಂಧಾನ ಅರ್ಜಿಯನ್ನು ಪುರಸ್ಕರಿಸಿ ಸಿವಿಲ್ ದಾವೆ ವಜಾಗೊಳಿಸಿ 2021ರ ಆಗಸ್ಟ್ 14ರಂದು ಚಿಕ್ಕಮಗಳೂರಿನ ತರೀಕೆರೆಯ ಹಿರಿಯ ಸಿವಿಲ್ ನ್ಯಾಯಾಲಯ ಮಾಡಿದ ಆದೇಶ ರದ್ದು ಕೋರಿ ಚೇತನ್ ಕುಮಾರ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ವಜಾಗೊಳಿಸಿದೆ.
4 ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ದಂಡದ ಮೊತ್ತವನ್ನು ಪಾವತಿಸಬೇಕು. ಜುಲೈ 14 ರ ಒಳಗೆ ದಂಡ ಪಾವತಿಸದಿದ್ದರೆ ಭೂಕಂದಾಯ ಹಿಂಬಾಕಿ ಎಂದು ಪರಿಗಣಿಸಿ ಅದನ್ನು ವಸೂಲಿ ಮಾಡಬಹುದಾಗಿದೆ ಎಂದು ಜಿಲ್ಲಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ಲೋಕ ಅದಾಲತ್ ಗೆ ಹೋಗಿ ಸಹಿ ಮಾಡಿ ನಂತರ ಸಂಧಾನ ಪತ್ರದ ವಿಚಾರ ಗೊತ್ತಿರಲಿಲ್ಲ ಎಂದರೆ ಹೇಗೆ? ಕಾನೂನು ಪ್ರಕ್ರಿಯೆ ಆರಂಭಿಸಲು ನ್ಯಾಯಾಲಯ ಮುಂದಾಗ ಬೇಕೇ? ಈ ಪ್ರಕರಣವನ್ನು ವಕೀಲರ ಪರಿಷತ್ ಗೆ ಕಳುಹಿಸಲಾಗುತ್ತದೆ. ವಕೀಲರು ಸಂಧಾನದ ಬಗ್ಗೆ ನಿಮಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಚಾರದ ಕುರಿತು ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಹೇಳಿದೆ.
ರಾಜೀ ಮಾಡಿಕೊಂಡು ಈ ರೀತಿ ವಾದಿಸುತ್ತೀರಿ, ಅವರು ಏನೆಂದುಕೊಂಡಿದ್ದಾರೆ, ಇದು ನ್ಯಾಯಾಲಯವನ್ನು ಮೀರುವ ಯತ್ನ ಎಂದು ಹೈಕೋರ್ಟ್ ಖಾರವಾಗಿ ಹೇಳಿದೆ.