ಬೆಂಗಳೂರು: ಬ್ಯಾಅಂಕ್ ಸಿಬ್ಬಂದಿಯೇ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂಪಾಯಿ ಗೋಲ್ಡ್ ಲೋನ್ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ಬೆಳಕಿಗೆ ಬಂದಿದೆ.
ಪೀಣ್ಯದಲ್ಲಿರುವ ಇಂಡಸ್ಇಂಡ್ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಉದ್ಯೋಗಿ ನಾಗೇಶ್, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 1.53 ಕೋಟಿ ರೂ. ಸಾಲ ಪಡೆದು ಬ್ಯಾಂಕ್ಗೆ ಮೋಸ ಮಾಡಿದ್ದಾನೆ.
ಸುಮಾರು 15 ನಕಲಿ ಅಕೌಂಟ್ಗಳ ಮೂಲಕ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಗೋಲ್ಡ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್, ಅಡಮಾನವಿಡುವ ಚಿನ್ನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ. ಇದನ್ನೇ ದುರುಪಯೋಗಪಡಿಸಿಕೊಂಡು, ನಕಲಿ ಚಿನ್ನದ ಸರಗಳಿಗೆ ಹಾಲ್ಮಾರ್ಕ್ ಇರುವ ಅಸಲಿ ಕೊಂಡಿಗಳನ್ನು ಮಾತ್ರ ಜೋಡಿಸಿ, ಅವುಗಳನ್ನು ಅಸಲಿ ಎಂದು ಪರಿಗಣಿಸಿ ಲೋನ್ ಮಂಜೂರು ಮಾಡಿದ್ದಾನೆ. ಬ್ಯಾಂಕ್ನ ಆಡಿಟಿಂಗ್ ವೇಳೆ ನಾಗೇಶ್ನ ಕೃತ್ಯ ಬೆಳಕಿಗೆ ಬಂದಿದೆ.
ಬ್ಯಾಂಕ್ ಅಧಿಕಾರಿಗಳು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದಾಗ, ನಾಗೇಶ್ ತನ್ನ ಸ್ನೇಹಿತನಾಗಿರುವ ಉದ್ಯಮಿ ಜಗದೀಶ್ಗೆ ಮೋಸ ಮಾಡಲು ಪ್ಲಾನ್ ಮಾಡಿದ್ದ. ಕಡಿಮೆ ಬೆಲೆಗೆ ಹರಾಜಿಗೆ ಬಂದಿರುವ ಚಿನ್ನದಿಂದ 40 ಲಕ್ಷ ರೂ. ಲಾಭ ಗಳಿಸಬಹುದು ಎಂದು ಜಗದೀಶ್ ಅವರನ್ನು ನಂಬಿಸಿದ್ದಾನೆ. ನಾಗೇಶ್ ಮಾತು ನಂಬಿ ಜಗದೀಶ್ 1.53 ಕೋಟಿ ರೂ. ಹಣವನ್ನು ನಾಗೇಶ್ಗೆ ನೀಡಿದ್ದು, ಆ ಹಣವನ್ನು ಬ್ಯಾಂಕ್ಗೆ ಪಾವತಿಸಿ ನಾಗೇಶ್ ಎಸ್ಕೇಪ್ ಆಗಿದ್ದಾನೆ.
ಮೋಸ ಹೋಗಿರುವ ಜಗದೀಶ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ನಾಗೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.